Wednesday, March 21, 2012

ಯುಗಾದಿಯ ಹಂಸ ಸಂದೇಶ


ಯುಗಾದಿಯ ಹಂಸ ಸಂದೇಶ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹೊಸ ನಿಮಿಷಕೆ ರಸ ನಿಮಿಷಕೆ ಕಾತುರದಿ ಕಾಯುವೆವು
ರಭಸದಲಿ ಬಂದು ಆತುರದಿ ಜಾರಿ ಮಾಯವಾಗುವುವು

ಬೆಳಗು ಇಳೆಯ ದಿಗಂತದಿ ಪ್ರತಿ ನಿಮಿಷ ಹರಿವುದು
ಬೆಳಕು ಹರಿಯುವ ದಿನ ನಿತ್ಯದ ವ್ರತಕೆ ಬೆರಗುವೆವು

ಹೊಸತು ಹಳೆಯದಾದ ಮೇಲೂ ಹಳಸಿ ಹೋಗದು
ಬೆಸೆದು ಮಾಸಿ ಹೋಗದಂತೆ ಬುರುಡೆಯಲಿ ಅಡಗಿದ್ದು

ಹೊಸತೆಂದರೇನು? ವರುಷ ಮತ್ತೆ ಮತ್ತೆ ಬರುವುದೇನು?
ಹೊಸತೆಲ್ಲಾ ನವ ಹರುಷ ಮಾತ್ರವೇ ಅಲ್ಲದೆ ಬೇರೇನು?

ಈಗ ತಾನೇ ಹುಟ್ಟಿದ ಕಂದನ ಸಂತಸದಂತೆಯೇ ಚೇತನವು
ಯುಗಾದಿ ಮತ್ತೊಮ್ಮೆ ಬಂದರೂ ಅಲ್ಲವೇನು ನವ ಹರುಷವು

ಹುರುಪು ಚಿಗುರುವ ಮೊಳಕೆಯಲ್ಲಿದೆ; ಆಗಸದ ಮೋಡದಲ್ಲಿದೆ 
ಮಾರುತನು ಬೀಸುವಾಗ ತರುವ ಮಲ್ಲಿಗೆಯ ಸುವಾಸನೆಯಲ್ಲಿದೆ

ಹೋದ ವರುಷದ ಯುಗಾದಿಯು ತಂದ ಆಶಯಗಳೆಲ್ಲ ನಿಜವಾಗಿದೆ
ಇದೋ ಹೊಸ ವರುಷವು ಇನ್ನೊಂದು ಹಂಸ ಸಂದೇಶವ ತಂದಿದೆ

No comments:

Post a Comment