Tuesday, July 31, 2012

ಪೀಚು ಭರದಲಿ ಹಣ್ಣಾದರೆ?


ಪೀಚು ಭರದಲಿ ಹಣ್ಣಾದರೆ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಎಲೆಲೆ! ಎಲೆ ಮರೆಯ ಪೀಚು ಕಾಯಿ
ಏನಾಯಿತು ನಿನಗೆ? 

ಪೀಚಾದರೆ ಕಾಣದೆಯೇ ಇರುವುದೇ ಅಲ್ಲ;
ಹಣ್ಣಿನ ಘಮವಿರದೆ ಮಂಗವೂ ಮುಟ್ಟದು

ಬೇಗ ಬೇಗ ಬೆಳೆಯುವ ಗಮನ ಇರಲಿ
ಎಲೆಗಿಂತಾ ದೊಡ್ಡದಾಗಿ ಬೆಳೆಯ ಬೇಕು

ಎಲೆ ಹಸಿರಾದರೆ, ನೀ ಕೆಂಪು ಹಣ್ಣು
ಎಲ್ಲೆಲ್ಲೂ ಬೀರಬೇಕು ಕಂಪು ಪಸರಿಸಿ

ಎಲೆಲೆ ಹೆಣ್ಣೇ! ನಾ ತಿನ್ನ ಬೇಕಾದರೆ,
ದೊಡ್ಡ, ಕಂಪು ಬೀರುವ, ಕೆಂಪು ಹಣ್ಣು

ಕೇಳು! ಹೀಗಾಗ ಬೇಕು; ನಾವಿಬ್ಬರೂ ಹೀಗಾಡುತಿರಬೇಕು:

ತುಟಿ ಇಟ್ಟ ಒಡನೆಯೇ ಭರಸದಿ ರಸವನ್ನು ಸೂಸಬೇಕು
ಕಟಿಯನು ಕೈಲಿ ಹಿಡಿದರೆ ಬಿಗಿಯಲಿ, ಸೆಟೆದ ಬಿಲ್ಲಾಗಬೇಕು
ಮುಟ್ಟಿದೊಡೆ ಜಿಂಕೆಯಂತೆ ಚಕ್ಕನೆ ಚಿಮ್ಮಿ ಎಗರುತಿರಬೇಕು
ಮುತ್ತಿಟ್ಟ ಒಡನೆಯೇ ಬಿಸಿ ರಕ್ತ ಮೈಯೆಲ್ಲಾ ಹರಿಯಲೇ ಬೇಕು 
ಒತ್ತಿ, ಒತ್ತಿದ ಎಡೆಯಲೆಲ್ಲಾ ಎದೆಯ ಡವಡವ ಕೇಳುತಿರಬೇಕು

ಹೊತ್ತು ಮೂಡಿದರೂ,
ನೆತ್ತಿಗೇರಿದರೂ,
ಎತ್ತೆತ್ತಲೂ ಕತ್ತಲಾದರೂ,
ಹತ್ತಿರ - ಹತ್ತಿರ ಒತ್ತುತಾ ಇರಬೇಕು

ದೊಡ್ಡ
ಗುಂಡನೆಯ
ಹಣ್ಣಾದ ಹೆಣ್ಣೇ
ಉಣ್ಣುತಿರಬೇಕು
ಗೇಣು ಮೊಳವಾಗಿ
ಅಲೆಯುತಿರಬೇಕು, ಅಳೆಯುತಿರಬೇಕು, ಸುಳಿಯುತಿರಬೇಕು,
ಗೇಲಿ ಮಾಡುತ್ತಾ, ಧಾಳಿ ಮಾಡುತ್ತಾ,ಹೇರಳ ಹಾವಳಿ ಮಾಡುತ್ತಾ
ಗೂಳಿಯಾ ಅಬ್ಬರದಲಿ ತಬ್ಬುತಿರಬೇಕು; ಕೇಳಿಯಾಡುತಿರಬೇಕು
ಸಿಡಿಲು ಬಡಿಯುತಿರಬೇಕು;
ಇಳೆಯೆಲ್ಲಾ ಥರ ಥರ ನಡುಗಿ ಕಂಪಿಸುತಿರಬೇಕು.

Monday, July 30, 2012

ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.


ನಾವು ಬೇರೆ; ನಮ್ಮ ಇರುವಿಕೆಯೇ ಬೇರೆ.
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಹೊಸತು ಹೊಸೆಯುವ ಅತೀವ್ರ ಆಸೆ. ಇದು ನನ್ನ ವ್ರತ: ವ್ರತದ ಕಂಕಣ ಕೂಡ ಹೊಸದಿರಬೇಕು. ಹೊಸ ಕಂಕಣವನ್ನು ಉಷೆ ಮೂಡಿದಾಗ ಹೊಸಾದಾಗಿಯೇ ಹೊಸೆಯಬೇಕು. ಹೊಸ ಹೊಸ ಆಸೆ ಹೊತ್ತು, ಹೊತ್ತು ಬೆಳಗ ತಂದಾಗ, ಶ್ವಾಸದ ಪ್ರತಿ ಉಸುರಿಗೆ ಇಂದೇ ಅರಳಿದ ಕುಸುಮದ ಸುವಾಸನೆಯೇ ಬಡಿಯಬೇಕು. ದುಂಬಿಗಳ ಹಿಂಡು ರಭಸದಿ ಬರುವುದಕ್ಕೂ ತುಸು ಮುಂಚೆಯೇ ವನದ ಕುಸುಮಗಳೆಲ್ಲಾ ನನಗೇ ಕಾದಿರುತ್ತವೆ.

ಭೂತದ ಕಸದ ನಾತ ಎಸೆಯದೆಯೇ ಅದರ ಮಲವನ್ನೇ ವರುಷಗಳೆಲ್ಲಾ ಸೇವಿಸುವರ ಸಹವಾಸವೇ ಬೇಡ. ಅವರಿಗೆ ನಿನ್ನೆಯೂ, ಇಂದೂ, ನಾಳೆಯೂ ಒಂದೇ! ಹೊಸತಿಗೆ ಹಸಿವಿಲ್ಲ; ಹೊಸತರ ಘಾಸಿಯಂತೂ ಇಲ್ಲವೇ ಇಲ್ಲ; ಮೀಸೆ ನರೆತರೂ ಮಾಸಿದ ಮನಸು. 

ನನ್ನ, ನನ್ನಂತಹವರ ವರ್ಣವೆ ಬೇರೆ; ನಾವು, ನೀವೂ ಅಂತಹವರೇ ಅಹುದಲ್ಲವೇ? ಬೆಸ ಹೇಳಬೇಡಿ. ನಮಗೆ ವಿಶ್ರಾಂತಿ ಬೇಡ. ವಿಕ್ರಾಂತ ನಾಕ ನಮ್ಮ ನಾಡಿನ ಸಿರಿ ನಾಮ. 

Sunday, July 29, 2012

ಮೂರ್ತಿಯ ಅಮೆರಿಕಾನುಭವ


ಮೂರ್ತಿಯ ಅಮೆರಿಕಾನುಭವ

ನಾ ಬೇರೆ; ನನ್ನ ಕಥೆಯೇರಿದ ರಥದ ಪಥವೇ ಬೇರೆ. ಪುಸ್ತಕ ಹಿಡಿಯಲು ಬಂದವರೇ ಎಲ್ಲರೂ. ಅಂದಿನ ಕನ್ನಡಿಗರು, dಮಿಕ್ಕೆಲ್ಲಾ ಭಾರತೀಯರೂ, ಅಮೇರಿಕಾದಲ್ಲಿ ಓದಲು ಬರುವುದೆಂದರೆ ದೊಡ್ಡಸ್ತಿಕೆ! ಅತ್ಯುನ್ನತ ದರ್ಜೆಯಲ್ಲಿ ಕಾಲೇಜಿಗೆ ಉತ್ತೀರ್ಣತೆಯಲ್ಲಿ ಮೊದಲಿಗರು ಮಾತ್ರ ಬರಿವಂತಿತ್ತು. 

ನನಗೆ ನೇರವಾಗಿ ಪ್ರಾಧ್ಯಾಪಕ ವೃತ್ತಿಯ ಹಿರಿಮೆಯಲ್ಲಿ ಅಮೇರಿಕಾದ ನೆಲದಲ್ಲಿ ಕಾಲಿಡುವ ಲಭ್ಯವೆಂದರೆ ಕೇಳಿದವರು ಬಾಯಿ ಬಿಡುತ್ತಿದ್ದರು. ಹಲವರು ನಂಬಲೇ ಇಲ್ಲ. 

ಬಂದದ್ದಾಯಿತು. ವಿಮಾನದಿಂದ ಇಳಿದ ಮಾರನೆಯ ದಿನವೇ ಪರದೇಶದ ಪ್ರಸಿಧ್ಧ ವಿಶ್ವ ವಿದ್ಯಾಲಯದಲ್ಲಿ ರಂಗ ಪ್ರವೇಶವೂ ಆಗಿಹೋಯಿತು. ನಾನು ಇತರ ಪ್ರಾಧ್ಯಾಪಕರಂತೆ ಕಾಣುತ್ತಿರಲಿಲ್ಲ. ಯಾರೋ ವಿದ್ಯಾರ್ಥಿಯೇ ಎಂದೇ ತಿಳಿದು ಕೊಂಡಿದ್ದವರೇ ಎಲ್ಲರೂ. 

ಕಾಗದದ ಮೇಲೆ ಬರೆಯುವುದಕ್ಕಿಂತ, ತಲೆಯಲ್ಲಿ ಬರೆದುಕೊಳ್ಳುವುದೂ, ವಿಜ್ಞಾನ ಮತ್ತು ತಂತ್ರ ಜ್ಞಾನದ ಕ್ಲಿಷ್ಟ ಗಣಿತಗಳನ್ನೂ, ವಿದ್ಯುತ್ ಮಂಡಲಗಳನ್ನೂ ಮಿದುಳಿನಲ್ಲಿಯೇ ಗುಣುಗುಣಿಸುವುದು ಅತಿಶಯದ ಹವ್ಯಾಸ. ಪಾಠ ಮಾಡುವಾಗ ಇತರ ಪ್ರಾಧ್ಯಾಪಕರೆಲ್ಲಾ ಪುಸ್ತಕದ ಮೊರೆಹೋಗಿ, ಕೈಬರಹದಲ್ಲಿ ಬರೆದುಕೊಂಡು ಬಂದದ್ದನ್ನು ಶಿಸ್ತಿನಲ್ಲಿ ವೈಟ್ ಬೋರ್ಡಿನ ಮೇಲೆ ಕಾಪಿ ಮಾಡಿಕೊಂಡು ಮಾತನಾಡುವುದು ಸಾಮಾನ್ಯವಾದ ಮತ್ತು ಒಪ್ಪಿಗೆಯ ಸಂಪ್ರದಾಯ. ನಾನು ಬರಿಯ ಕೈಯಲ್ಲಿ ರಂಗ ಪ್ರವೇಶವನ್ನು ಮಾಡಿ, ಗಂಟೆಗಟ್ಟಲೆ ಕ್ಲಿಷ್ಟ ತಂತ್ರಜ್ಞಾನ ಮಂಡನೆ ಮಾಡುತ್ತಿದ್ದೆ. ನನಗೆ ಇದೇನೂ ವಿಶೇಷ ವ್ರತವೆನ್ನಿಸುತ್ತಿರಲಿಲ್ಲ. ಜೊತೆಗೆ, ವಿಜ್ಞಾನ ಮತ್ತು ತಂತ್ರ ಜ್ಞಾನದ ಮೂಲ ತತ್ವಗಳನ್ನೂ, ಆಳವಾದ ವಾದಗಳನ್ನೂ ಬಾಳೆಯ ಹಣ್ಣು ಸುಲಿಯುವಂತೆ ವಿದ್ಯಾರ್ಥಿಗಳ ತಲೆಗೆ ತಿನ್ನಿಸುತ್ತಿದ್ದೆ. 

ಸುಮಾರು ಒಂದು ತಿಂಗಳು ಕಳೆದಿರಬಹುದು. ಒಂದು ದಿನ ಯಥಾ ಪ್ರಕಾರದಲ್ಲಿ ಪಾಠ ಮಾಡುತ್ತಿದ್ದೆ. ವೈಟ್ ಬೋರ್ಡಿನ ಕಡೆಗೆ ತಿರುಗಿ ಕೆಲವು ಸಾಲುಗಳನ್ನು ಬರೆದ ಮೇಲೆ, ತಿರುಗಿ ನೋಡಿದಾಗ ವಿದ್ಯಾರ್ಥಿಗಳ ಜೊತೆಗೆ ಹಲವು ಪ್ರಾಧ್ಯಾಪಕರೂ ಕುಳಿತಿರುವುದು ಕಂಡಿತು.    

ಬಾಲ್ಯದಲ್ಲೇ ಮತ್ತು ಹದಿಹರೆಯದಲ್ಲೇ ಕನ್ನಡ ಸಾಹಿತ್ಯದ ದಿಗ್ಗಜಗಳ ಜೊತೆ ಜೊತೆಯೇ ಪ್ರೌಢ ವಿಷಯಗಳಲ್ಲಿ ಭಾಷಣಗಳನ್ನು ಮಾಡಿ ಪಳಗಿದ ನನಗೆ ದಳು ಸಭೆಯಲ್ಲಿ ಯಾರು ಯಾರು ಕುಳಿತಿದ್ದಾರೆ ಎನ್ನುವುದು ಕಣ್ಣು ಒಂದೇ ಸಾರಿ ಮಿಟುಕುವುದರಲ್ಲೇ ಗೊತ್ತಾಗಿ ಬಿಡುತ್ತಿತ್ತು. 

ನನಗೆ ಅರಿವಿಲ್ಲದಂತೆಯೇ ನನ್ನ ಬಹಳ ಹಿರಿಯ ಪ್ರಾಧ್ಯಾಪಕ ಸಹಪಾಟಿಗಳೆಲ್ಲಾ ನನ್ನ ಸಭೆಯಲ್ಲಿ ಕೂತು ನನ್ನ ಬಗ್ಗೆ ನನ್ನೆಲ್ಲಾ ವಿದ್ಯಾರ್ಥಿಗಳೂ ಹೇಳಿದ್ದು ನಿಜವೇ ಎಂದು ತಾವೇ ಪರೀಕ್ಷಿಸಿ ನಮ್ಮ ಡೀನ್ಗೆ ವರದಿ ಒಪ್ಪಿಸಲು ಬಂದಿದ್ದರೆಂದು ಪಾಠವೆಲ್ಲಾ ಮುಗಿದ ಮೇಲೆ ನನಗೆ ಹೇಳಿದರು. 

ಮುಂದೆ ನನ್ನ ವಿದ್ಯಾರ್ಥಿಗಳ ಜೊತೆ ಹಲವು ಸಹಪಾಟಿ ಪ್ರಾಧ್ಯಾಪಕರೂ ಪಾಠ ಕೇಳುವುದು ಸಾಮಾನ್ಯವಾಗಿ ಬಿಟ್ಟಿತು. ನನಗೆ ವಿದ್ಯುತ್ ತಂತ್ರಜ್ಞಾನವೇ ಅಲ್ಲದೆ, ಉದ್ಯಮ ಜ್ಞಾನ, ಕಂಪ್ಯೂಟರ್, ಖಗೋಳ ಶಾಸ್ತ್ರ, ಮತ್ತಿದರ ಜೊತೆಗೆ ಅಂತರ ರಾಷ್ಟ್ರೀಯ ಸಂಗೀತ ತುಲನವನ್ನೂ ಪಾಠ ಮಾಡಲು ಕರೆ ಬಂದಿತು. 

ಮುಂದುವರಿಯುತ್ತದೆ. 

ಸರಿಯೆಂದರೇನು?


ಸರಿಯೆಂದರೇನು?
ಡಾಕ್ಟರ್ ಕೆ. ಆರ್. ಎಸ. ಮೂರ್ತಿ

ಸರಿ ಇರಬೇಕೇನೋ ಸರಿಯೇ; ಯಾರಿಗೆ ಸರಿ, ಯಾರಿಗಿಲ್ಲ
ಇರುವುದೊಂದೇ ಸರಿ ಇರಬಹುದೇ? ಇಲ್ಲಪ್ಪ ಇಲ್ಲವೇ ಇಲ್ಲ

ಬರೀ ಒಂದೇ ತರಹದ ಸರಿ ಮಾತ್ರ ಹುಟ್ಟಲೇ ಇಲ್ಲ, ಗೊತ್ತೇ?
ಪರಿಪರಿ ಸರಿಗಳು ಬೇರೆ ಬೇರೆಯೇ ಕಡೆ ಧಿಡೀರನೆ ಹುಟ್ಟಿತೆ?

ಇದಕ್ಕೆ, ಅದು ಯಾರೆಂದು ಗೊತ್ತಿಲ್ಲ; ಇದು ಇರುವುದೂ ಪತ್ತೆಯಿಲ್ಲ
ಅದಾಗೇ ಆ ಸರಿಯು, ಈ ಸರಿಯನ್ನು "ಅಪ್ಪಣೆಯೇ ಸಾರ್" ಎಂದಿಲ್ಲ

ನಾನೇ ಸರಿ, ಅವರೇ ಸರಿ, ಒಬ್ಬರು ಮಾತ್ರವೇ ಸರಿ ಖರೆ ಎಂದರೆ
ಅನ್ನಿ ನೀವು: ಎಲ್ಲರೂ ಸರಿಯೇ; ಯಾರೂ ಸರಿಯಂತೂ ಆಗಿಹೋದರೆ

ಮಿಕ್ಕವರೂ ತಾವೇ ಸರಿಯೆಂದಾರು; ಅದಕ್ಕೆಯೇ ಸುಮ್ಮನೆ ತಲೆಯಾಡಿಸಿ
ರೊಕ್ಕ ಕೊಟ್ಟರೆ ಸರಿಯಲ್ಲದ್ದೂ ಸರಿಯೇ ಖರೆ; ಕಾಸು ಕೈಗೆ ಬಿಸಿಮಾಡಿಸಿ

ಮಿಕ್ಕ ಬೇರೆ ಬೇರೆ ಸರಿಯಲ್ಲದ್ದು ಸರಿ ಮಾಡುವ ತಂತ್ರ ಸರೀ ಅರಿತುಕೊಳ್ಳಿ
ಹಕ್ಕು ಯಾರಿಗಿದೆ ಗೊತ್ತೇ? ಚೂರಿ, ಪಿಸ್ತೂಲು, ದೊಡ್ಡ ಬಾಂಬು ಪಡೆದುಕೊಳ್ಳಿ

ಲಂಚ, ಮಂಚ ಇವೆಲ್ಲಾ ಗೊತ್ತಿರಬೇಕು; ಗುರೂ, ಬಾಬಾಗಳ ಕಾಲು ಹಿಡಿದು
ಕಾಂಚನ ಸೇವೆ ಮಾಡಲು ಕಲಿಯಬೇಕು; ಸರಿಯೇ ಬಾಯಿಯಿಂದ ಬಂದದ್ದು

ಸರಿಯ ಸೂತ್ರವಿದು; ಖರೆಯ ಸ್ವಾರಸ್ಸ್ಯವಿದು; ದಿಟದ ಗುಟ್ಟಿದು; ಮರೆಯದಿರಿ
ಹರೆಸುವೆ, ಹಾರೈಸುವೆ ನಿಜ ಬೀಜ ಮಂತ್ರ ನಿಮ್ಮ ವಶ; ಮುಂದೆ ಮೆರೆಯುತಿರಿ 

ಕವಿಗೆ ಕವನ ಸಂತಾನ ಮತ್ತೆ ಮತ್ತೆ


ಕವಿಗೆ ಕವನ ಸಂತಾನ ಮತ್ತೆ ಮತ್ತೆ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಚಿತ್ತದಲಿ ಬಿತ್ತಿದ ಹೊಸತು ಒಂದು, ಮಿದುಳಿನಲ್ಲಿ ಮೊಳಕೆ ಬಿಟ್ಟಿತು
ತಲೆಯ ಮೂಲೆ, ಮೂಲೆಗಳಲಿ ಹಗಲೂ, ಇರುಳೂ ಆವರಿಸಿತ್ತು

ಬೆಳೆಯುತ್ತಾ ಅಬಲೆಯ ಅಂಡದಲಿ ಉಬ್ಬುವಂತೆ ಮಸ್ತಿಷ್ಕವಾಗಿತ್ತು
ಬಸುರಿಯು ತಿಂಗಳುಗಳು ಹೊತ್ತವಳು ಒಂಬತ್ತಕ್ಕೆ ಸುಸ್ತಾದಂತಾಗಿತ್ತು

ಹೊರುವುದು ಭಾರಿಯೇ ಭಾರವೇನೋ ಎಂಬಂತೆ ಹೆರುವಾತುರತೆಯಿತ್ತು
ಬರೆದೇ ತೀರಬೇಕು, ಭರದಲ್ಲಿ ಭಾರವನು ಬರಹದಲಿ ಇಳಿಸಿ ಬಿಡದಹೊರತು

ಕವಿಗೆ ಒಂದೇ? ಎರಡೇ? ಕವನ ಸಂತಾನ ನೂರು, ಸಾವಿರವೇ ಆದೀತು
ಕಾವ್ಯ ಸುಂದರಿಯು ಮತ್ತೆ, ಮತ್ತೆ ಬರುವಂತಹವಳಿಗೆ ತಂತಾನೇ ಮನಸೋತು

Wednesday, July 25, 2012

ನೀವೇನು ಬೇರೆ ಕಂಡಿರಿ?


ನೀವೇನು ಬೇರೆ ಕಂಡಿರಿ?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ 

ಇಷ್ಟ ದೇವರಿಗೆ ಈಡುಗಾಯಿ ನೂರೆಂಟು ಒಡೆದಾಯಿತು
ಕಷ್ಟ ಬಂದಾಗ ವೆಂಕಟರಮಣಾ ಎನುತ್ತಾ ಕೂಗಾಯಿತು

ಮಂಗಳಾಂಗನ ಮೂತಿಗೆ ಮಂಗಳಾರತಿ ಬೆಳಗಾಯಿತು
ಗಂಗಾ ನದಿಯಲ್ಲಿ ಮುಳುಗಿ ಲಿಂಗಾರ್ಚನೆ ಸಾಂಗವಾಯಿತು

ಇನ್ನೂ ಏಕೋ ನನ್ನ ಆಸೆಗಳೆಲ್ಲಾ ಈಡೇರಿಲ್ಲಾ ಗೊತ್ತಾಗಿಲ್ಲ
ಏನು ದೇವರೇ ಕಾಕ-ತಾಳೀಯ ವಾದವು ನಿನಗರಿವಾಗಿಲ್ಲವಲ್ಲ

ಜಾತಕದಲ್ಲಿ ಏನೆಲ್ಲಾ ವೈಭವಗಳು ನನಗೆ ಲಭ್ಯವೆಂದು ಬರೆದಿದೆ
ಚಾತಕ ಪಕ್ಷಿಗಿಂತಾ ಆತಂಕ ಅತಿರೇಕ ನನ್ನದೆಂದು ಗೊತ್ತೇ ಇದೆ

ವಿಭೂತಿ, ನಾಮಗಳು ಮೂರು, ಮೈಯೆಲ್ಲಾ ಮುದ್ರೆ, ಲಿಂಗಧಾರಣೆ
ಅಭೂತ ಪೂರ್ವವೋ ಎಂಬಂತೆ ಎಲ್ಲಾ ದೇವರಿಗೂ ಆಯಿತು ಪಾರಣೆ

'ಅಲ್ಲಾ' ಎಂದು ಊರಿಗೆಲ್ಲಾ ಕೇಳುವ ಹಾಗೆ ಕೂಗಿಲ್ಲ; ಕುರಿ ಕಡಿಯಲಿಲ್ಲ
ಸಲ್ಲದ ಗುರುವೆಂದು ಶಿಲುಬೆಗೆ ಕಾಲೂರಿ ಎಸುವನು ತುಸೂ ನೆನಸಿಲ್ಲ

ಯಾರಿರ ಬಹುದು ಅತಿ ಮೂಢರು: ನಂಬಿದವರು ನಾನೂ ಮತ್ತು ನೀವೂ?
ಸರಿಯಾದ ಉತ್ತರ, ಪರಿಹಾರಗಳ ಬೇರೆ ಏನಾದರೂ ಕಂಡಿರಾ ತಾವೂ?

Monday, July 23, 2012

ನಿಮಗೆ ಎಷ್ಟು ನಾಲಿಗೆಗಳು?


ನಿಮಗೆ ಎಷ್ಟು ನಾಲಿಗೆಗಳು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಚಕ್ಕಲಿ ಹಿಟ್ಟೂ, ಉದ್ದಿನ ಹಿಟ್ಟು, ಕೋಡುಬಳೆಯಾ ಮಿಶ್ರಣವೂ
ಚಕ್ಕನೆ ಕುದಿಯುವ ಎಣ್ಣೆಯಲಿ ಬಿದ್ದರೆ ತಾನೇ ರುಚಿ ಗರಿ, ಗರಿಯು

ನಯವಾಗಿ ಬೆಣ್ಣೆ, ತುಪ್ಪಗಳ ಹಾಕಿ ನೀವಿದ ಹೋಳಿಗೆಯಾ ಕಣಕವೆ
ಚೋಯ್ಯನೆ ಬಿಸಿ ಕಾವಲಿಯ ಮೇಲೆ ಅದು ಬಿದ್ದ ಮೇಲೆಯೇ ಅಲ್ಲವೇ

ಬಾಳೆಯೆಲೆಯ ಮೇಲೆ ರಾರಾಜಿಸಿ ನಿಮ್ಮ ನಾಲಿಗೆಗೆ ಕಾಯುವುದು
"ತಾಳು ತುಸು ನಾಲಿಗೆಯೇ" ಎಂದರೆ ಕೇಳದೆ ಜೊಲ್ಲು ಸುರಿಯುವುದು

ಈ ಕೆಲ ಸಾಲುಗಳ ಓದುವಾಗಲೇ ನಿಮ್ಮ ನಾಲಿಗೆ ಒದ್ದೆಯಾಗಿದೆಯಲ್ಲವೇ
ಇದೆಯೇ ಮಜಾ; ಮಿದುಳಿನಲ್ಲೂ ಒಂದು ಬಹು ದೊಡ್ಡ ನಾಲಿಗೆಯಿದೆಯಲ್ಲವೇ!