ಪೇಳಮ್ಮಯ್ಯ ನಮ್ಮ ಕಾಡುವ ಶಾಪ
ಕೆ.ಆರ್.ಎಸ್. ಮೂರ್ತಿ
ಒಂದೇ ಹೊಕ್ಕಳ ಬಳ್ಳಿಗಳು
ಉಂಡದ್ದು ಒಂದೇ ಎಲೆಯಲ್ಲಿ,
ನಾವು ನಿನ್ನ ಮಕ್ಕಳು
ಅದೇ ಮೊಲೆಗಳ ಅಪ್ಪಿಕೊಂಡು ಹೀರಿದ್ದು
ಅದೇ ಕೈಯಿನ ತುತ್ತು, ಮೊಸರನ್ನ, ಉಪ್ಪಿನಕಾಯಿ
ಅದೇ ಅಮ್ಮನ ತೊಡೆಯ ಮೆತ್ತನೆಯ ಹಾಸಿಗೆ
ಅಂದು ಅಂದದ್ದು ಅದೇ ಅಮ್ಮನ ಹೆಸರು
ಮಿಂದದ್ದು ಮುಂಜಾನೆ ಒಂದೇ ಕೊಳದಲ್ಲಿ
ನುಡಿದ ಸ್ವರಗಳು ಒಂದೇ
ಆಡಿದ, ಕುಣಿದು ಕುಪ್ಪಳಿಸಿದ
ಅಂಗಳವೂ ಒಂದೇ
ಮುಡಿದ ಹೂಮಾಲೆ ಒಂದೇ
ಹಾಡಿದ ರಾಗ ಒಂದೇ
ಕಡಿದ ಗುಂಡು ಕೋಡುಬಳೆಯ
ಹಿತಖಾರವೊಂದೇ
ಗರಿಗರಿ ಚಕ್ಕುಲಿಯ
ಘಮಘಮ ರುಚಿಯೂ ಒಂದೇ
ಕಡೆದ ಗಟ್ಟಿ ಮೊಸರಿನಲಿ ತೇಲಿಬಂದ
ಅಪ್ಪಟ ಬೆಣ್ಣೆಯನು ಮೆದ್ದಾಗ
ನಾಲಿಗೆಗೆ ಆದ ಆನಂದವೂ ಒಂದೇ
ಹಿಡಿದು ಮುಡಿಯಲ್ಲಿ, ಕೊಬ್ಬರಿ-ಕಲ್ಲು ಸಕ್ಕರೆ
ಸವಿಯ ಚೆಂದವೊಂದೇ
No comments:
Post a Comment